ಬೆಳಗಾವಿ ಪಟ್ಟಣದಿಂದ ಸುಮಾರು ೩ ರಿಂದ ೬ ಕಿಲೋಮೀಟರ್ ದೂರದಲ್ಲಿದೆ. ಇದು ೨೦೦೧ ಜನವರಿ ೨೩ರಂದು ಉದ್ಘಾಟನೆಗೊಂಡಿತು. == ಇತಿಹಾಸ == ಸ್ವಾಮಿ ವಿವೇಕಾನಂದರು ತಮ್ಮ ಪರಿವ್ರಾಜಕ ದಿನಗಳಲ್ಲಿ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮುಂತಾದ ಹಲವು ಪ್ರದೇಶಗಳಿಗೆ ಭೇಡಿಯಿತ್ತು, ೧೮೯೨ರ ಅಕ್ಟೋಬರ್ ೧೫ರಂದು ಬೆಳಗಾವಿಗೆ ಕಾಲಿರಿಸಿದರು. ಆ ಸಮಯದಲ್ಲಿ ಸ್ವಾಮೀಜಿಯವರು ತಂಗಲು ಒಂದು ದಿನ ಶ್ರೀಯುತ ಭಾಟೆಯವರ ನಿವಾಸಕ್ಕೆ ಬಂದಿದ್ದರು. ಆಗ ಭಾಟೆಯವರು ತಮ್ಮ ಗೆಳೆಯ ಹರಿಪದ ಮಿತ್ರ ಅವರಿಗೆ ಸ್ವಾಮೀಜಿ ಅವರನ್ನು ಪರಿಚಯಿಸಿದರು. ಹರಿಪದ ಮಿತ್ರ ಅವರ ಮನೆಯಲ್ಲಿ ಸ್ವಾಮೀಜಿ ಅವರು ಒಂಭತ್ತು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಸ್ವಾಮಿ ವಿವೇಕಾನಂದರು ಪಾವನಗೊಳಿಸಿದ್ದ ಈ ಗೃಹದ ಮೇಲೆ ಆಸಕ್ತಿ ಹೊಂದಿದ್ದ ರಾಮಕೃಷ್ಣ ಮಠ ಮತ್ತು ಮಿಷನ್‍ನ ಆಡಳಿತ ಮಂಡಳಿಯು ಸ್ವಾಮೀಜಿ ಅವರು ತಂಗಿದ್ದ ಗೃಹವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ಆಲೋಚಿಸಿತ್ತು. ಹೀಗಾಗಿ ೨೦೦೦ ಜೂನ್ ೧ರಂದು ಆ ಗೃಹದ ಉಸ್ತುವಾರಿ ತೆಗೆದುಕೊಂಡಿತು. ಅಂದು ಪವಿತ್ರ ಫಲಹಾರಿಣಿ ಕಾಳೀಪೂಜೆಯೂ ನಡೆಯಿತು. ಕಟ್ಟಡವನ್ನು ಸರಕಾರ ವಹಿಸಿಕೊಟ್ಟಾಗ ಅದು ವಾಸಕ್ಕೆ ಯೋಗ್ಯವಾಗಿರಲಿಲ್ಲ. ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ನವೀಕರಣಗೊಳಿಸುವ ನಿರ್ಧಾರ ಕೈಗೊಂಡರು. ಸ್ವಾಮೀಜಿಯವರು ತಂಗಿದ್ದ ಕೊಠಡಿಯನ್ನು ಬಿಟ್ಟು ಬೇರೆಲ್ಲಾ ಭಾಗಗಳನ್ನು ಕೆಡವಿ ೬ ತಿಂಗಳಲ್ಲಿ ಜೀರ್ಣೋದ್ಧಾರವನ್ನು ಪೂರ್ಣಗೊಳಿಸಿದರು. == ಪ್ರಸ್ತುತ ಕೆಲಸಗಳು == ಪ್ರಸ್ತುತ ಆಶ್ರಮವು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನೇಕ ಶಿಬಿರಗಳನ್ನು ನಡೆಸುತ್ತಿದೆ. ಪ್ರತಿನಿತ್ಯ ೧೦೦ ಬಡವಿದ್ಯಾರ್ಥಿಗಳಿಗೆ ಸಂಜೆ ಹಾಲು ಹಾಗು ತಿಂಡಿಯನ್ನು ಉಚಿತವಾಗಿ ನೀಡುತ್ತಿದೆ. ಸ್ವಾಮಿ ವಿವೇಕಾನಂದ ಕಂಪ್ಯೂಟರ್ ತರಬೇತಿ ಕೆಂದ್ರವನ್ನೂ ತೆರೆಯಲಾಗಿದೆ. ಇದಲ್ಲದೆ ಅಂಗವಿಕಲರಿಗೆ ಗಾಲಿ ಕುರ್ಚಿಗಳು, ತ್ರಿಚಕ್ರ ವಾಹನಗಳನ್ನು ಉಚಿತವಾಗಿ ನೀಡುವುದು ಹಾಗು ಬಡವರಿಗೆ ವಸ್ತ್ರದಾನ ಮುಂತಾದ ಮುಖ್ಯ ಕೆಲಸಗಳನ್ನು ಕೈಗೊಂಡಿದೆ. == ಉಲ್ಲೇಖಗಳು ==